
ನವದೆಹಲಿ: ತನ್ನ ಪ್ರೇಯಸಿ ತನ್ನ ಮೊಬೈಲ್ ಕರೆಗೆ ಉತ್ತರಿಸುತ್ತಿಲ್ಲ ಎಂದು ಹತಾಶಗೊಂಡ ಪ್ರೇಮಿಯೋರ್ವ ಇಡೀ ಗ್ರಾಮದ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿರುವ ಆಘಾತಕಾರಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿರುವಂತೆ ವಿದ್ಯುತ್ ಕಂಬವೇರಿದ ಯುವಕ ಒಂದು ಭಾಗದ ಹೈಟೆನ್ಷನ್ ವಿದ್ಯುತ್ ತಂತಿಗಳನ್ನು ಕಟರ್ ಮೂಲಕ ಕತ್ತರಿಸುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಯುವಕ ತನ್ನ ಪ್ರೇಯಸಿ ತನ್ನ ಮೊಬೈಲ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹತಾಶೆಗೊಂಡಿದ್ದ. ಸಾಕಷ್ಟು ಬಾರಿ ಕರೆ ಮಾಡಿದರೂ ಆಕೆ ತನ್ನ ಕರೆ ಸ್ವೀಕರಿಸುತ್ತಿಲ್ಲ. ಬದಲಿಗೆ ಆಕೆಯ ಫೋನ್ ಸತತವಾಗಿ ಎಂಗೇಜ್ ಬರುತ್ತಿದೆ ಎಂದು ಆಕ್ರೋಶಗೊಂಡಿದ್ದಾನೆ. ಇದೇ ಕೊಪದಿಂದ ಆಕೆಯ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬ ಏರಿ ನೋಡ ನೋಡುತ್ತಲೇ ಹೈಟೆನ್ಷನ್ ವಿದ್ಯುತ್ ತಂತಿಗಳನ್ನುಕತ್ತರಿಸಿ ಹಾಕಿದ್ದಾನೆ.ಯುವಕನ ಈ ಕೃತ್ಯದಿಂದ ಇಡೀ ಗ್ರಾಮಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.
ಪರ–ವಿರೋಧ ಟೀಕೆ: ಇನ್ನು ಯುವಕನ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಪ್ರೀತಿಯ ನಶೆಯಲ್ಲಿ ವಿದ್ಯುತ್ ಕಂಬ ಏರಿದ ಯುವಕ ಅಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರೆ ಗತಿ ಏನು ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಆಕೆ ಮಾಡಿದ ತಪ್ಪಿಗೆ ಇಡೀ ಗ್ರಾಮದ ವಿದ್ಯುತ್ ಸರಬರಾಜು ನಿಲ್ಲಿಸಿದ್ದು ತಪ್ಪು ಎಂದು ಟೀಕಿಸಿದ್ದಾರೆ.ಮತ್ತೆ ಕೆಲವರು ವೈಯುಕ್ತಿಕ ಸಮಸ್ಯೆಗಳಿಂದ ವಿದ್ಯುತ್ ಕಂಬ ಏರಿ ತಂತಿ ಕತ್ತರಿಸಿದರೆ ವಿದ್ಯುತ್ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ.
ಬಿಹಾರದಲ್ಲೂ ಇಂತಹುದೇ ಘಟನೆ: ಇನ್ನು ವಿದ್ಯುತ್ ಕಂಬ ಏರಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ಪ್ರಕರಣ ವರದಿಯಾಗಿರುವುದು ಇದೇ ಮೊದಲೇನಲ್ಲ.. ಈ ಹಿಂದೆ ಇಂತಹುದೇ ಘಟನೆ ಬಿಹಾರದಲ್ಲಿ ನಡೆದಿತ್ತು. 2022ರಲ್ಲಿ ಬಿಹಾರದ ಪೂರ್ಣಿಯಾ ಜಿಲ್ಲೆಯ ಗಣೇಶಪುರ ಗ್ರಾಮದ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕತ್ತಲೆಯಲ್ಲಿ ರಹಸ್ಯವಾಗಿ ಭೇಟಿಯಾಗಲು ಪ್ರತಿದಿನ ಸಂಜೆ ಗ್ರಾಮದ ವಿದ್ಯುತ್ ಕಡಿತಗೊಳಿಸುತ್ತಿದ್ದ. ಹತ್ತಿರದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸಾಮಾನ್ಯವಾಗಿದ್ದರೂ ಗ್ರಾಮದಲ್ಲಿ ಮಾತ್ರ ಎರಡು ಮೂರು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳುತ್ತಿತ್ತು. ಕೊನೆಗೆ ಗ್ರಾಮಸ್ಥರು ಈ ರಹಸ್ಯ ಬೇದಿಸಲು ನಿಂತಾಗ ಯುವಕ ಸರಸ ಸಲ್ಲಾಪ ಪ್ರಕರಣ ಬೆಳಕಿಗೆ ಬಂದಿತ್ತು.
