ಮೈಸೂರು ದಸರಾ ಆಚರಣೆ ಮತ್ತು ವಿಶೇಷವಾಗಿ ಚಾಮುಂಡೇಶ್ವರಿ ದೇವಾಲಯದ ಸುತ್ತ ರಾಜಕೀಯ ಮಾತುಗಳು ಬೇಸರ ಮೂಡಿಸಿವೆ : ರಾಜವಂಶಸ್ಥೆ ಪ್ರಮೋದಾದೇವಿ
ಮೈಸೂರು: ರಾಜ್ಯ ಸರ್ಕಾರವು ಆಯೋಜಿಸಲು ಉದ್ದೇಶಿಸಿರುವ ದಸರಾ ಆಚರಣೆಗಳು ಹಾಗೂ ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿರುವ ಪವಿತ್ರ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ ನಡೆದಿರುವ ರಾಜಕೀಯವು ತೀವ್ರ ಬೇಸರ ಮೂಡಿಸಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಈ ವರ್ಷದ ದಸರಾ ಆಚರಣೆಯ ಬೆಳವಣಿಗೆಗಳು ಕಳವಳಕಾರಿಯಾಗಿವೆ ಎಂದು ಹೇಳಿದ್ದಾರೆ. ದಸರಾ ಆಚರಣೆಗಳು, ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿರುವ ಪವಿತ್ರ ಚಾಮುಂಡೇಶ್ವರಿ ದೇವಾಲಯದ ಸುತ್ತ ರಾಜಕೀಯವು ನಡೆಯುತ್ತಿರುವುದು ತೀವ್ರ ಬೇಸರ ತರಿಸಿದೆ. ಆದ್ದರಿಂದ ನಾನು ಈ ಪತ್ರ ಬರೆಯುತ್ತಿದ್ದೇನೆ.

ಈ ವರ್ಷದ ನಾಡಹಬ್ಬ ಉದ್ಘಾಟನೆಗೆ ಆಹ್ವಾನಿಸಲಾದ ಗಣ್ಯರ ಆಯ್ಕೆಯು ಸಂಘರ್ಷದ ಅಭಿಪ್ರಾಯಗಳಿಗೆ ಕಾರಣವಾಗಿದೆ. ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳಿಗೆ ಸೇರಿಲ್ಲ ಎಂಬಂತಹ ಸಂವೇದನಾರಹಿತ ಹೇಳಿಕೆ ಅನಗತ್ಯವಾಗಿತ್ತು.ಅದು ಹಿಂದೂ ದೇವಸ್ಥಾನ ಅಲ್ಲದಿದ್ದರೆ, ಅದನ್ನು ಎಂದಿಗೂ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರುತ್ತಿರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಸರ್ಕಾರದ ದಸರಾವು ಸಾಂಸ್ಕೃತಿಕ ಆಚರಣೆ ಎಂಬುದು ನಮ್ಮ ಪರಿಗಣಿತ ಅಭಿಪ್ರಾಯ. ರಾಜ್ಯವು ಅದರ ಸ್ವಭಾವತಃ, ಅಂತಹ ಉತ್ಸವವನ್ನು ನಡೆಸುವಲ್ಲಿ ಧಾರ್ಮಿಕ ಪಾವಿತ್ರ್ಯ ಸಂಪ್ರದಾಯ ಅಥವಾ ಪರಂಪರೆಯನ್ನು ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಆಯೋಜಿಸುವ ಆಚರಣೆಗಳು ಧಾರ್ಮಿಕ ಸ್ವರೂಪದ್ದಾಗಿಲ್ಲ ಮತ್ತು ಅವು ವಿಜಯದಶಮಿ ಸೇರಿದಂತೆ ನವರಾತ್ರಿ ಆಚರಣೆಗಳೊಂದಿಗೆ ಹೊಂದಿಕೆಯಾಗುತ್ತವೆ ಎಂಬುದು ಸ್ಪಷ್ಟವಾಗಿದೆ, ಆದರೆ ನಾವು ಈ ಧಾರ್ಮಿಕ ಆಚರಣೆಗಳನ್ನು ಖಾಸಗಿಯಾಗಿ, ಹಳೆಯ ಧಾರ್ಮಿಕ ಪದ್ಧತಿಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಆಚರಿಸುತ್ತಿದ್ದೇವೆ.
