SIR ಎಸ್.ಐ.ಆರ್. ವಿಫಲಗೊಳಿಸುವ ಹುನ್ನಾರ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್
ವಿಜಯಪುರ, ಜುಲೈ 13 : ಎಸ್.ಐ.ಆರ್. ವಿಫಲಗೊಳಿಸುವ ಹುನ್ನಾರದೊಂದಿಗೆ ರಾಜ್ಯ ಸರ್ಕಾರ ಶಾಶ್ವತ ರಹವಾಸಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಆರಂಭಿಸಿ ದೇಶದ ಆಂತರಿಕ ಭದ್ರತೆಗೆ ದೊಡ್ಡ ಆತಂಕ ಮೂಡಿಸುತ್ತಿದ್ದು, ಕೂಡಲೇ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು. ಅಲ್ಲದೇ ಪಿ.ಆರ್.ಸಿ. ಪ್ರಕ್ರಿಯೆ ಕೈಗೊಳ್ಳುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು ಪಿ.ಆರ್.ಸಿ. ಜಾರಿ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದರು. ನಂತರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರು ಹಾಗೂ ಕೇಂದ್ರ ಗೃಹ ಮಂತ್ರಾಲಯಕ್ಕೆ ಲಿಖಿತ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ 
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಅಕ್ರಮ ವಲಸಿಗರನ್ನು ರಕ್ಷಣೆ ಮಾಡಿ ತನ್ನ ಮತ ಬ್ಯಾಂಕ್ ಆಗಿ ಮಾಡಿಕೊಳ್ಳಲು ಕಾಂಗ್ರೆಸ್ ಈ ಷಡ್ಯಂತ್ರ ರೂಪಿಸಿದೆ. ರಾಜ್ಯದ ಆಂತರಿಕ ಭದ್ರತೆಯನ್ನೂ ಗಣನೆಗೆ ತೆಗೆದುಕೊಳ್ಳದೇ ಕುರ್ಚಿ ಆಸೆಗೆ ಇಷ್ಟೊಂದು ನೀಚ ಮಟ್ಟಕ್ಕೆ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಪಿಆರ್ಸಿ ಜಾರಿಯಿಂದ ಅಕ್ರಮ ನಿವಾಸಿಗಳಿಗೆ ಅಧಿಕೃತ ಮುದ್ರೆ ದೊರಕಿ ಕಾನೂನು ಸುವ್ಯವಸ್ಥೆಯೂ ನಿಯಂತ್ರಣದಲ್ಲಿ ಇಲ್ಲದ ಪರಿಸ್ಥಿತಿ ಬರಲಿದೆ. ಭಾರತದ ಸಂವಿಧಾನವು ದೇಶಾದ್ಯಂತ ಎಲ್ಲಾ ನಾಗರಿಕರಿಗೆ ಒಂದೇ ಪೌರತ್ವವನ್ನು ಕಲ್ಪಿಸುತ್ತದೆ. ಆದರೆ, ಕರ್ನಾಟಕ ಸರ್ಕಾರವು ಶಾಶ್ವತ ನಿವಾಸ ಪ್ರಮಾಣಪತ್ರ ವನ್ನು ನೀಡುವುದು ಈ ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ. ಇದು ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರವಿಲ್ಲದೆ ಶಾಶ್ವತ ನಿವಾಸಿಗಳು ಎಂಬ ಪ್ರತ್ಯೇಕ ವರ್ಗವನ್ನು ರಚಿಸಲು ಪ್ರಯತ್ನಿಸುತ್ತದೆ ಎಂದರು.

ಬಿಜೆಪಿ ಮುಖಂಡ ಪ್ರಮುಖ ಚಂದ್ರಶೇಖರ ಕವಟಗಿ ಮಾತನಾಡಿ, ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರನ್ನು ನೆಲೆಯನ್ನು ಅಧಿಕೃತಗೊಳಿಸುವ ದೊಡ್ಡ ಷಡ್ಯಂತ್ರಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಬಾಂಗ್ಲಾದೇಶ ಮಾತ್ರವಲ್ಲದೇ ಪಶ್ಚಿಮ ಬಂಗಾಳದಿಂದ ಲಕ್ಷಾಂತರ ಮಂದಿ ಕರ್ನಾಟಕಕ್ಕೆ ಬಂದಿದ್ದಾರೆಂಬ ಮಾಹಿತಿ ಇದೆ. ಈ ಪ್ರಮಾಣಪತ್ರದಿಂದ ಕರ್ನಾಟದ ಪ್ರಜೆಗಳಿಗೆ ಇದರಿಂದ ತೊಂದರೆ ಆಗಲಿದೆ. ನೀರು, ಆಹಾರ, ಪಡಿತರಚೀಟಿ ಸವಲತ್ತುಗಳು ಅವರಿಗೆ ಸಿಗಲಿದ್ದು, ರಾಜ್ಯದ ಪೌರರ ಸೌಲಭ್ಯಗಳು ಕಡಿಮೆ ಆಗಲಿದೆ. ಅಪರಾಧ ಪ್ರಮಾಣವೂ ಹೆಚ್ಚಾಗುವ ಭೀತಿ ತಲೆದೋರಿದೆ ಎಂದರು. ಪಿಆರ್.ಸಿ ಗಂಭೀರ ಸಾಂವಿಧಾನಿಕ, ಕಾನೂನು ಮತ್ತು ರಾಷ್ಟ್ರೀಯ ಭದ್ರತಾ ಆತಂಕಗಳನ್ನು ಹುಟ್ಟುಹಾಕಿದೆ. ಇದರ ಕುರಿತು ಕೇಂದ್ರ ಗೃಹ ಇಲಾಖೆಯು ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸದ ರಮೇಶ್ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ವಿಜಯ್ ಕುಮಾರ್ ಕೊಡಿಗನೂರ್, ಸಂಜಯ ಪಾಟೀಲ ಕನಮಡಿ, ಈರಣ್ಣ ರಾವೂರ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ, ಸಂದೀಪ್ ಪಾಟೀಲ, ಚಿದಾನಂದ ಛಲವಾದಿ, ಕಾಸುಗೌಡ ಬಿರಾದಾರ, ಸಂಜೀವ ಐಹೊಳ್ಳಿ, ಸ್ವಪ್ನಾ ಕಣಮುಚನಾಳ, ಸಂತೋಷ, ಪಾಟೀಲ್ ಡಂಬಳ ರವಿಕಾಂತ ಬಗಲಿ, ಹಣಮಂತಗೌಡ ಬಿರಾದಾರ, ಶ್ರೀ ಹರ್ಷಗೌಡ ಪಾಟೀಲ, ಎಸ್.ಎ. ಪಾಟೀಲ, ವಿಜಯ ಜೋಶಿ, ರಾಜೇಶ್ ತಾವಸೆ, ಕೃಷ್ಣಾ ಗುನ್ನಾಳಕರ, ಶಿವರುದ್ರ ಬಾಗಲಕೋಟ, ರಾಜಶೇಖರ್ ಮಗಿಮಠ, ರಾಹುಲ್ ಜಾಧವ, ರಾಘವೇಂದ್ರ ಕಾಪಸೆ, ಭರತ ಕೋಳಿ,ಕಾಂತು ಶಿಂಧೆ, ವಿನಾಯಕ ದಹಿಂಡೆ, ಬಾಲರಾಜ ರೆಡ್ಡಿ, ರಾಜಕುಮಾರ ಸಗಾಯಿ, ಶ್ರೀಧರ್ ಬಿಜ್ಜರಗಿ, ಚಿನ್ನು ಚಿನಗುಂಡಿ, ರಾಜೇಂದ್ರ ವಾಲಿ, ಭಾರತಿ ಭೂಯ್ಯಾರ, ಈರಣ್ಣ ವಾಡೇದ, ಜಯಶ್ರೀ ಅಬ್ದುಲಪೂರ, ಸಂಗು ಉಕ್ಕಲಿ, ಆನಂದ ಮುಚ್ಚಂಡಿ, ಅನೀಲ್ ಉಪ್ಪಾರ, ಸಿದ್ದು ಬುಳ್ಳಾ, ಹರೀಶಗೌಡ ಪಾಟೀಲ, ಪರಶುರಾಮ ರಜಪೂತ, ಹುಸೇನ ಗೌಂಡಿ, ವಿವೇಕ ತಾವರಗೇರಿ, ರಾಮಚಂದ್ರ ಚವ್ಹಾಣ, ಗಣೇಶ ಉಪ್ಪಾರ, ವಿಕಾಸ ಪದಕಿ, ಶರಣು ಕುಂಬಾರ ಸಿದ್ದು ಮಲ್ಲಿಕಾರ್ಜುನ ಮಠ ಮಲ್ಲಮ್ಮ ಜೋಗುರ್ ಪಾಲ್ಗೊಂಡಿದ್ದರು.
