Adichunchanagiri matt:ಆದಿಚುಂಚನಗಿರಿ ಮಠಕ್ಕೆ ಸೇರಿದ 100 ಕೋಟಿ ರೂ ಮೌಲ್ಯದ ಭೂಮಿ ಕಬಳಿಸಲು ನಕಲಿ ದಾಖಲೆ ಸೃಷ್ಟಿ: 6 ಸರ್ಕಾರಿ ಅಧಿಕಾರಿಗಳು ಸೇರಿ 11 ಜನರ ಬಂಧನ. ಕಂದಾಯ ಇಲಾಖೆಯಿ ಅಧಿಕಾರಿಗಳಿಂದಲೇ ಆಸ್ತಿ ಕಬಳಿಕೆಗೆ ಯತ್ನ; ಉಪ ತಹಶೀಲ್ದಾರ್ಗಳಾದ ದೀಪಕ್ ಮತ್ತು ಎಂ.ಪಿ. ರವಿ(ಕೆಂಗೇರಿ ನಾಡ ಕಚೇರಿ), ಕಂದಾಯ ನಿರೀಕ್ಷಕರಾದ ಕಿರಣ್ ಕುಮಾರ್ ಮತ್ತು ಅರುಣ್ ಕುಮಾರ್
ಬೆಂಗಳೂರು, ಜು.15: ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ 6 ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ 6 ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ.
ಆರೋಪಿಗಳಾದ ಉಪ ತಹಶೀಲ್ದಾರ್ಗಳಾದ ದೀಪಕ್ ಮತ್ತು ಎಂ.ಪಿ. ರವಿ(ಕೆಂಗೇರಿ ನಾಡ ಕಚೇರಿ), ಕಂದಾಯ ನಿರೀಕ್ಷಕರಾದ ಕಿರಣ್ ಕುಮಾರ್ ಮತ್ತು ಅರುಣ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳಾದ ಶಿವಪ್ರಸಾದ್ ಮತ್ತು ಸತೀಶ್ ಕುಮಾರ್ ಹಾಗೂ ಫ್ರಾನ್ಸಿಸ್, ಆರೋಗ್ಯಸ್ವಾಮಿ, ಶ್ರೀನಿವಾಸು, ನರೇಂದ್ರ ಕುಮಾರ್, ಜೋಸೆಫ್ ಎಂದು ಗುರುತಿಸಲಾಗಿದೆ.
ಅಕ್ರಮದಲ್ಲಿ ಭಾಗಿಯಾಗಿರುವ ಉಳಿದ ಶಂಕಿತರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಈ 6 ಎಕರೆ ಭೂಮಿ, ಕೆಂಗೇರಿಯ ಕಂಬಿಪುರ ಗ್ರಾಮದ ಸರ್ವೆ ಸಂಖ್ಯೆ 43 ರಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಒಡೆತನದ 45 ಎಕರೆ ಆಸ್ತಿಯ ಭಾಗವಾಗಿದೆ. ಇದನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅದನ್ನು ಕಬಳಿಸಲು ಯತ್ನಿಸಿದ್ದಾರೆ ಎಂದು ಅವರು ಹೇಳಿದರು.
ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದ ಸರ್ವೆ ನಂಬರ್ 43ರಲ್ಲಿ 45 ಎಕರೆ ಜಮೀನು ಗುತ್ತಿಗೆ ಆಧಾರದಲ್ಲಿ 2004ರಲ್ಲಿ ಕಂದಾಯ ಇಲಾಖೆಯಿಂದ ಮಂಜೂರು ಮಾಡಿಸಿಕೊಳ್ಳಲಾಗಿತ್ತು. 45 ಎಕರೆಗಳ ಪೈಕಿ 35 ಎಕರೆ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ 2018ರಲ್ಲಿ ಸರ್ಕಾರದಿಂದ ಖರೀದಿಸಲಾಗಿತ್ತು. ಉಳಿದ 10 ಎಕರೆ ಜಾಗವನ್ನು ಗೋಶಾಲೆಗಾಗಿ ಮೀಸಲಿರಿಸಲಾಗಿತ್ತು. ಈ ವೇಳೆ ಫ್ರಾನ್ಸಿಸ್ ಎಂಬಾತ 6 ಎಕರೆ ಜಾಗವು ತನ್ನ ತಂದೆ ಆರೋಗ್ಯ ಸ್ವಾಮಿಗೆ ಸೇರಿದೆ ಎಂದು ತಕರಾರು ತೆಗೆದಿದ್ದ. ಜಮೀನಿಗೆ ವಾರಸುದಾರನಂತೆ ಬಿಂಬಿಸಿಕೊಂಡು ನಕಲಿ ಮರಣ ಪ್ರಮಾಣಪತ್ರ ಸೇರಿದಂತೆ ಇನ್ನಿತರೆ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ನ್ಯಾಯಾಲಯಕ್ಕೆ ಸುಳ್ಳು ದಾವೆ ಹೂಡಿ ಆದೇಶ ಪಡೆದುಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಭೂಮಿ ಕಬಳಿಸಲು ಯತ್ನಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಫ್ರಾನ್ಸಿಸ್, ಕೆಲವು ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸೇರಿ, 1960-61ರ ಅವಧಿಯಲ್ಲಿ ಆಂಟನಿ ಅವರ ಮಗ ಆರೋಗ್ಯಸ್ವಾಮಿ ಎಂಬುವವರಿಗೆ ಸೈನಿಕನ ಕೋಟಾದಡಿಯಲ್ಲಿ ಸರ್ವೆ ಸಂಖ್ಯೆ 43 ರಲ್ಲಿ 6 ಎಕರೆ ಭೂಮಿಯನ್ನು ನೀಡಲಾಗಿದೆ ಎಂದು ಹೇಳುವ ದಾಖಲೆಗಳನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಫ್ರಾನ್ಸಿಸ್ ಆರೋಗ್ಯಸ್ವಾಮಿ ಅವರ ಮಗ ಮತ್ತು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಹೇಳಿಕೊಂಡು ನಕಲಿ ವಂಶವೃಕ್ಷ, ಮರಣ ಪ್ರಮಾಣಪತ್ರ, ಅನುದಾನ ಪ್ರಮಾಣಪತ್ರ ಮತ್ತು ಇತರ ಕಂದಾಯ ದಾಖಲೆಗಳು ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಕೋಟ್ಯಂತರ ರೂ. ಮೌಲ್ಯದ ಜಮೀನು ಕಬಳಿಸಲು ಫ್ರಾನ್ಸಿಸ್ ಜೊತೆ ಕಂದಾಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ತಾಲೂಕು ಕಚೇರಿಯ ಸರ್ಕಾರಿ ನೌಕರರು ಶಾಮೀಲಾಗಿದ್ದಾರೆ. ಮಧ್ಯವರ್ತಿಗಳ ಕುಮ್ಮಕ್ಕಿನಿಂದ ಉಪ ತಹಶೀಲ್ದಾರ್ ಎಂ.ಪಿ. ರವಿ ಸುಳ್ಳು ವಂಶವೃಕ್ಷ ಪ್ರಮಾಣಪತ್ರ ಮಾಡಿಸಿಕೊಟ್ಟಿರುವುದ ಬೆಳಕಿಗೆ ಬಂದಿದ್ದು, ಸಾಗುವಳಿ ಚೀಟಿ ಸೇರಿದಂತೆ ಇನ್ನಿತರೆ ದಾಖಲಾತಿಗಳನ್ನು ಸೃಷ್ಟಿಸಿದ್ದರು. ಈ ಸಂಬಂಧ ಸರ್ಕಾರಿ ನೌಕರರನ್ನು ಬಂಧಿಸಲಾಗಿದೆ.
ಪ್ರಮುಖ ಆರೋಪಿ ಫ್ರಾನ್ಸಿಸ್ ಬೆಂಗಳೂರು ಸುತ್ತಮುತ್ತಲಿನ ಬೆಲೆಬಾಳುವ ಜಮೀನು ಕಬಳಿಸಲು ಯತ್ನಿಸಿರುವ ಶಂಕೆ ಇದೆ. ಈ ಬಗ್ಗೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ತಿಳಿಸಿದ್ದಾರೆ.
