ಕೋಲಾರ: ಮುಂಜಾನೆ ಎದ್ದು ತಾಯಿಗೆ ತಾನು ಕೆಲಸಕ್ಕೆ ಹೋಗಿ ಬರುವೆ ಎಂದು ಹೇಳಿ ಹೊರಟವನು ನಿರ್ಜನ ಪ್ರದೇಶದಲ್ಲಿ ಹುಡುಗಿಯೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶೆಟ್ಟಿಹಳ್ಳಿ ಗ್ರಾಮದ ಯುವಕ ಸತೀಶ್ (18), ಪಣಮಾಕನಹಳ್ಳಿಯ ಶೇತಾ (17) ಮೃತ ಪ್ರೇಮಿಗಳು ಬೇರೆ ಬೇರೆ ಜಾತಿಯವರಾಗಿದ್ದು ತಮ್ಮ ಪ್ರೀತಿಯ ವಿಷಯವನ್ನು ಮನೆಯವರ ಹತ್ತಿರ ಹೇಳಿದರೆ ವಿರೋಧಿಸುತ್ತಾರೆ ಎಂದು ಯೋಚಿಸಿ ತಾಲ್ಲೂಕಿನ ಹೊರವಲಯದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ರೈಲಿಗೆ ತಲೆಕೊಟ್ಟಿದ್ದಾರೆ. ಸದ್ಯ ಇಬ್ಬರ ಪ್ರೀತಿಯ ಬಗ್ಗೆ ಎರಡು ಕುಟುಂಬದವರು ನಮಗೆ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಶ್ವೇತ ಮಾಲೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಇತ್ತೀಚೆಗೆ ಕಾಲೇಜಿಗೂ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಆದರೆ ಮೃತ ಶ್ವೇತ ತಂದೆ ತಾಯಿ ಅವರ ಪ್ರೀತಿಯ ವಿಷಯ ನಮಗೆ ತಿಳಿದಿರಲಿಲ್ಲ ಎಂದಿದ್ದಾರೆ.
ಪ್ರೇಮಿಗಳ ಆತ್ಮಹತ್ಯೆಗೆ ಕಾರಣವೇನು?
ಸತೀಶ್ ಇತ್ತೀಚೆಗಷ್ಟೇ ಮಾಲೂರಲ್ಲಿ ಐಟಿಐ ವ್ಯಾಸಂಗ ಮುಗಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಶ್ವೇತ ಸಹ ಪಿಯುಸಿ ಮುಗಿಸಿ ಪದವಿ ವ್ಯಾಸಂಗಕ್ಕೆ ಮಾಲೂರು ಪಟ್ಟಣಕ್ಕೆ ತೆರಳುತ್ತಿದ್ದಳು. ಸತೀಶ ಕಳೆದ ನಾಲ್ಕು ತಿಂಗಳಿನಿಂದ ಕೂಲಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ಹುಟ್ಟು ಹಬ್ಬದ ಹಿನ್ನೆಲೆ ಗ್ರಾಮದ ಸ್ನೇಹಿತರೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದ.ಬೆಳಿಗ್ಗೆ ಎದ್ದ ನಂತರ ತನ್ನ ತಾಯಿಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾನೆ. ಮನೆಯವರು ಎಲ್ಲೋ ಕೆಲಸಕ್ಕೆ ಹೋಗಿರಬೇಕು ಎಂದುಕೊಂಡಿದ್ದರು. ಆದರೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕುಟುಂಬಸ್ಥರಿಗೆ ಸ್ಥಳೀಯರೊಬ್ಬರು ಸತೀಶ್ ಹುಡುಗಿಯೊಬ್ಬಳ ಜೊತೆಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು. ಕೂಲಿ ಕೆಲಸಕ್ಕೆ ಹೋಗಿದ್ದ ತಂದೆ ಹಾಗೂ ತಾಯಿ ಇಬ್ಬರೂ ಓಡೋಡಿ ಬಂದು ಬ್ಯಾರಟರಾಯನಹಳ್ಳಿ ಬಳಿ ನೋಡಿದಾಗ ಪ್ರೇಮಿಗಳಿಬ್ಬರೂ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ್ದರು. ಅಲ್ಲಿಯೇ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಹೇಳಿದ ಪ್ರಕಾರ ಅವರಿಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಚಲಿಸುತ್ತಿದ್ದ ರೈಲಿನ ಎದುರಿಗೆ ಹಾರಿದ್ದಾರೆ. ಶ್ವೇತಳ ಶವ ಘಟನೆ ನಡೆದ ಸ್ಥಳದಿಂದ ಸುಮಾರು 50 ಮೀಟರ್ ದೂರಕ್ಕೆ ಎಳೆದುಕೊಂಡು ಹೋಗಿದ್ದರೆ, ಯುವಕ ಸತೀಶ್ ದೇಹ ಅಲ್ಲೇ ತುಂಡು ತುಂಡಾಗಿ ಬಿದ್ದಿತ್ತು. ಸತೀಶ್ ತಂದೆ ಕೂಡಾ ಅವರ ಪ್ರೀತಿಯ ವಿಷಯ ನಮಗೆ ತಿಳಿದಿರಲಿಲ್ಲ ಎಂದಿದ್ದಾರೆ.
